Homeಲೇಖನಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀ ಬಂಥನಾಳ ಸಂಗನಬಸವ ಸ್ವಾಮಿಗಳು

ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀ ಬಂಥನಾಳ ಸಂಗನಬಸವ ಸ್ವಾಮಿಗಳು

Published on

ಬಸವಯುಗ ವಚನಸಾಹಿತ್ಯದ ಸುಗ್ಗಿಕಾಲ. 12ನೆಯ ಶತಮಾನದ ಮಧ್ಯಭಾಗದಲ್ಲಿ ಮೈಮುರಿದು ಎದ್ದ ಲಿಂಗಾಯತ ಆಂದೋಲನ ಕನ್ನಡ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣ, ಚನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ, ಮಡಿವಾಳ ಮಾಚಿದೇವ ಇವರು ಸ್ಥಾಪಿಸಿದ ಜನಮುಖಿ ಸಾಮಾಜಿಕ ಸೇವೆಯ ಪರಂಪರೆಯನ್ನು ಮುಂದಿನ ಶರಣ ಧರ್ಮದ ಸ್ವಾಮಿಗಳು ನಿರಂತವಾಗಿ ನಡೆಸಿಕೊಂಡು ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ಪರಮ ಪೂಜ್ಯ ತೋಂಟದ ಎಡೆಯೂರ ಶ್ರೀ ಸಿದ್ಧಲಿಂಗ ಶಿವಯೋಗಿಗಳು, ಜೇವರಗಿ ಷಣ್ಮುಖ ಶಿವಯೋಗಿಗಳು ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು, ಮುರುಗೋಡ ಶ್ರೀ ಮಹಾಂತಪ್ಪಜ್ಜನವರು, ಗಚ್ಚಿನ ಮಠದ ಶ್ರೀ ಸಿದ್ಧಲಿಂಗಪ್ಪನವರು ಜಯದೇವ ಜಗದ್ಗುರುಗಳು , ಇಂತವರ ಸಾಲಿನಲ್ಲಿ ನಿಲ್ಲುವವರು ನಮ್ಮ ಬಂಥನಾಳ ಶ್ರೀ ಸಂಗನಬಸವ ಸ್ವಾಮಿಗಳು.

ಬಾರದ ನೆಲದಲ್ಲಿ ಬದುಕಿನ ಭರವಸೆಯನ್ನು ನೀಡಿದ ಅಪ್ರತಿಮ ಶಿವಯೋಗ ಸಾಧಕರು. ಬಂಥನಾಳ ಸಂಗನಬಸವ ಶಿವಯೋಗಿಗಳ ಜನನವು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಶರಣ ದಂಪತಿಗಳಾದ ಗೌರಾಂಬೆ ಮತ್ತು ಪರುತಯ್ಯ ನವರ ಪುತ್ರರಾಗಿ 1900 ರ ಜುಲೈ 27ರಂದು ಜನಿಸಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ಬಾಲ್ಯದಲ್ಲೆ ಪುರಾಣ ಪ್ರವಚಣ ಪೌರಾಣಿಕ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಲ್ಲಿಯೇ ಅಪೂರ್ವ ತೇಜಸ್ಸು, ಹಸನ್ಮುಖತೆಗೂಡಿಸಿಕೊಂಡು ಬೆಳೆದರು.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. 6ನೇ ತರಗತಿಯಲ್ಲಿ‘ರಾಜಾ ಸತ್ಯಹರಿಶ್ಚಂದ್ರ’ ಎಂಬ ಪೌರಾಣಿಕ ನಾಟಕದಲ್ಲಿ ತಾರಾಮತಿ ಪಾತ್ರಧಾರಿಯಾಗಿ ಅಭಿನಯಿಸಿ ಸುತ್ತಲ ಗ್ರಾಮಸ್ಥರ ಮೆಚ್ಚುಗೆ ಪಡೆದರು. 1913ರಲ್ಲಿ ಯರನಾಳ ಮಠದ ಪಂಪಾಪತಿ ಸ್ವಾಮೀಜಿ ಅವರು 11 ವರ್ಷದ ಸಂಗನಬಸವ ಶಿವಯೋಗಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವಿಕರಿಸಿದರು. ಮುಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮಠದ ಶಾಂತವೀರ ಶ್ರೀಗಳ ಸಮ್ಮುಖದಲ್ಲಿ ಸಂಸ್ಕೃತ ಭಾಷೆ, ಸಾಹಿತ್ಯದ ಮೇಲೆ ಅಪಾರ ಪಾಂಡಿತ್ಯ ಸಂಪಾದಿಸಿದರು. ಕೆಲವು ದಿನಗಳು ಗತಿಸಿದ ನಂತರ ಬಂಥನಾಳ ಮಠದ ಹಿಂದಿನ ಪೀಠಾಧಿಪತಿ ಚನ್ನಬಸವ ಶ್ರೀಗಳ ಅಪ್ಪಣೆಯಂತೆ ಸಂಗನಬಸವ ಶ್ರೀಗಳು 1916ರಲ್ಲಿ ಬಂಥನಾಳ ಮಠದ 4ನೇ ಪೀಠಾಧಿಪತಿಗಳನ್ನಾಗಿ ನಿಯೋಜಿಸುವಲ್ಲಿ ಲಚ್ಯಾಣ ಸಿದ್ದಲಿಂಗ ಮಹಾರಾಜರು ಶ್ರಮಿಸಿದರು. ನಂತರ ಕೆಲವು ದಿನ ಭೀಮಾ ತೀರದ ಭೀಮೇಶ್ವರ ಬೆಟ್ಟದಲ್ಲಿ ಶಿವಧ್ಯಾನ, ಶಿವಚಿಂತನೆ, 30 ದಿನ ಮೌನಾಚರಣೆ ವ್ರತ ಕೈಗೊಂಡರು.

*ಪೀಠಾಧಿಪತಿಯಾಗಿ ಆಯ್ಕೆ*
—————————————
ವೃಷವಲಿಂಗ ಸ್ವಾಮಿಗಳಿಂದ ಸ್ಥಾಪಿತವಾದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಶ್ರೀಮಠವು ಧಾರ್ಮಿಕ ಮತ್ತು ರಾಷ್ಟ್ರಧರ್ಮದ ಕಾರ್ಯಗಳಿಂದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ. ಶ್ರೀಮಠ ಪೀಠಾಧಿಪತಿಗಳಾದ ಶ್ರೀ ಸಂಗನಬಸವ ಸ್ವಾಮೀಜಿ ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು.

ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಬಲೇಶ್ವರದ ಶ್ರೀ ಶಾಂತವೀರ ಸ್ವಾಮಿಗಳಿಂದ ಸಂಸೃತ ಕಲಿತು 1916ರಲ್ಲಿ ಬಂಥನಾಳ ಮಠಕ್ಕೆ ನಾಲ್ಕನೇ ಪೀಠಾಧಿಪತಿಯಾಗಿ ನಿಯೊಜನೆಗೊಂಡರು.

ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದ ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು ಅವುಗಳು ಇಂದು ಶತಮಾನ ಸಂಭ್ರಮದಲ್ಲಿದ್ದು ಶ್ರೀಗಳ ಕೀರ್ತಿ ಕಿರೀಟಗಳು. ವಿಜಯಪುರ ಜಿಲ್ಲೆಯಲ್ಲಿ ಇಂದು‌ ಹಲವಾರು ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜು ತಲೆ ಎತ್ತಲು ಕಾರಣವಾದವು. ಅವರು ಅಂದು ಕೊಟ್ಟ ಸ್ಪೂರ್ತಿಯ ಕರೆ ಶೈಕ್ಷಣಿಕ ಕ್ರಾಂತಿ ಮಾಡಿ ಮಠಗಳ ‌ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ, ಸ್ವಾತಂತ್ರ್ಯ ಹೋರಾಟಗಾರರ ಬೆಂಬಲಕ್ಕೆ ನಿಂತು ಅವರಿಗೆ ಆಶ್ರಯ ನೀಡಿ ಹೋರಾಟಕ್ಕೆ ಅಣಿಯಾದ ಧೀರ ಸನ್ಯಾಸಿ ಈ ನಮ್ಮ ಬಂಥನಾಳ ಸಂಗನವಸವ ಶಿವಯೋಗಿಗಳು.

1923ರಲ್ಲಿ ಕರ್ನಾಟಕದ ಗಾಂದಿ ಹರ್ಡೆಕರ್ ಮಂಜಪ್ಪನವರಿಂದ ರಾಷ್ಟ್ರದೀಕ್ಷೆ ಪಡೆದರು. ಹರ್ಡೆಕರ್ ಮಂಜಪ್ಪನವರು ಒಂದು ರಾಷ್ಟ್ರ ಬೆಳೆಯಬೇಕಾದರೆ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ಶಿಕ್ಷಣ ಅವಶ್ಯ ಎಂದು ಹೇಳಿದರು. ಅಂದಿನಿಂದ ಖಾದಿ ಧರಿಸಿ ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರದ್ವಜಾರೋಹಣ ಮಾಡಲು ಪ್ರಾರಂಭಿಸಿದರು.

1925ರಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಕಟ್ಟಿದ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರಾಗಿ ಶೈಕ್ಷಣಿಕ‌ ಕೇಂದ್ರ ಮತ್ತು ದಾಸೋಹ ನಿಲಯ ಸ್ಥಾಪಿಸಿದರು. 1950 ರಲ್ಲಿ ಲಚ್ಯಾಣ ಗ್ರಾಮದಲ್ಲಿ ಸರ್ವಧರ್ಮ ಸಮ್ಮೇಳನ, ಸೊನ್ನದಲ್ಲಿ 1953 ಮತ್ತು 1963ರಲ್ಲಿ ಮಂಟಪ‌ ಪೂಜೆ ಮಾಡಿದ್ದಾರೆ. ವಿಜಯಪುರ ನಗರದಲ್ಲಿ 1954ರಲ್ಲಿ 770 ಅಮರಗಣಾಧೀಶ್ವರರ ಪೂಜೆ ನೇರವೇರಿಸಿದರು ಈ ಮಹಾತ್ಕಾರ್ಯದ ಸ್ಮರಣಾರ್ಥ ಬ್ರಹತ್ ಲಿಂಗದಾಕಾರದ ಮಂದಿರಲ್ಲಿ 770 ಲಿಂಗಗಳನ್ನು ಸ್ಥಾಪಿಸಿ ಕೀರ್ತಿ ಗಳಿಸಿದ್ದಾರೆ. ಈ ಲಿಂಗದ ಗುಡಿ ಇಂದು ಲಕ್ಷಾಂತರ ಭಕ್ತರ ಶೃದ್ಧಾಕೇಂದ್ರವೆನಿಸಿದೆ.

ಲಚ್ಯಾಣದಲ್ಲಿ ಅಮರಗಣಾಧೀಶ್ವರ ಪೂಜೆ ಲಕ್ಷದೀಪೋತ್ಸವದಂತ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಧಾರ್ಮಿಕ ಕೇದ್ರಗಳತ್ತ ಸೆಳೆದಿದ್ದಾರೆ. ತಾವು ಮಾಡಿದ ಪ್ರವಚನಗಳಿಂದ ಬಂದ ಹಣವನ್ನು ಶಿಕ್ಷಣ ಕ್ಷೇತ್ರ ಬೆಳವಣಿಗೆಗಾಗಿ ಬಳಿಸಿದ್ದಾರೆ ಹಲವಾರು ಶಾಲೆಗಳನ್ನು ಕಟ್ಟಿ ಬೆಳೆಸಿದ್ದಾರೆ. ನಿತ್ಯ ನಿರಂತರ ದಾಸೋಹ ಮಾಡಿ ದಾಸೋಹ ಮೂರ್ತಿಯಾಗಿದ್ದಾರೆ. ಸ್ವಾತಂತ್ರ ಹೋರಾಟಗಾರರಿಗೆ ಶ್ರೀ ಮಠದಲ್ಲಿ ಆಶ್ರಯ, ನೆಲೆ ನೀಡಿ ರಕ್ಷಿಸಿದ್ದಾರೆ. ಶ್ರೀಗಳು ದಾಸೋಹ, ಶೈಕ್ಷಣಿಕ, ರಾಷ್ಟ್ರಭಕ್ತಿ, ಧರ್ಮಜಾಗೃತಿ ನಡೆಸಿದ್ದಾರೆ.

*ಶೈಕ್ಷಣಿಕ ಕ್ರಾಂತಿಯ ಹರಿಕಾರ*
——————————————
ವಿದ್ಯಾರ್ಥಿಗಳೇ ದೇವರ, ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು. ನಾಡಿನೆಲ್ಲೆಡೆ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೀಗಳು, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.

18ನೇ ಶತಮಾನದಲ್ಲಿ ವೃಷಭಲಿಂಗ ಮಹಾಶಿವಯೋಗಿಗಳಿಂದ ಸ್ಥಾಪಿತವಾದ ಬಂಥನಾಳ ಮಠದ ಕೊಡುಗೆ ಅನನ್ಯ. ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಂಕರಲಿಂಗ ಶಿವಯೋಗಿಗಳು, ಚನ್ನಬಸವ ಶಿವಯೋಗಿಗಳು ಕುಗ್ರಾಮವನ್ನು ಸುಕ್ಷೇತ್ರವನ್ನಾಗಿಸಲು ಶ್ರಮಿಸಿದರು. ಬಸವಾದಿ ಪ್ರಮತರ ದಾರಿ ಕ್ರಮಿಸಿದರು. ತದನಂತರ ಬಂದ ಪೀಠಾಧಿಪತಿ ಸಂಗನಬಸವ ಮಹಾಶಿವಯೋಗಿಗಳ ಸಮಾಜ ಮುಖಿ ಕಾರ್ಯಗಳಿಂದ ಮಠದ ಕೀರ್ತಿ ಮುಗಿಲೆತ್ತರಕ್ಕೆರಿದೆ.

ಪ್ರವಚನದ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡರು. ಅವಿರತ ಪ್ರಯತ್ನದಿಂದ ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದರು. ಪರಿಣಾಮ ವಿಜಯಪುರ ಜಿಲ್ಲೆಯಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತವು. ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕ ಬಡ ವಿದ್ಯಾರ್ಥಿಗಳು ನಾಡಿನ ನಾನಾ ಭಾಗದಲ್ಲಿ ಸರ್ಕಾರಿ ನೌಕರಿ ಪಡೆದು ಸ್ವಾವಲಂಬಿಯಾಗಿ ಬದುಕುತ್ತ, ತಮ್ಮ ಜೀವನವನ್ನು ಪಾವನಗೊಳಿಸಿಕೊಂಡಿದ್ದಾರೆ.

ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು 1972 ಮೇ 7ರಂದು ಲಿಂಗೈಕ್ಯರಾದರು.

*ಪ್ರಮುಖ ಘಟನಾವಳಿಗಳು*

1923 ರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ದೀಕ್ಷೆ ಸ್ವೀಕಾರ.1925 ರಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಸ್ಥಾಪಿಸಿದ ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರಾಗಿ ಸೇವೆ. 1950 ರಲ್ಲಿ ಸರ್ವಧರ್ಮ ಸಮ್ಮೇಳನ ಆಯೋಜನೆ. 1953 ರಲ್ಲಿ ಸೊನ್ನದಲ್ಲಿ 63 ಪುರಾತನ ಮಂಟಪ ಪೂಜೆ. 1954 ರಲ್ಲಿ ವಿಜಯಪುರ ನಗರದಲ್ಲಿ 770 ಅಮರಗಣಾಧೀಶ್ವರರ ಪೂಜೆ. 1968 ರಲ್ಲಿ ವೃಷಭಲಿಂಗ ಮಹಾಶಿವಯೋಗಿಗಳನ್ನು ಬಂಥನಾಳ – ಲಚ್ಯಾಣ ಮಠದ ಪೀಠಾಧಿಪತಿಗಳನ್ನಾಗಿ ನೇಮಕ. 1969 ರಲ್ಲಿ ಲಚ್ಯಾಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅಮರಗಣದಿಶ್ವರರ ಪೂಜೆ, ಲಕ್ಷದೀಪೋತ್ಸವದಂತಹ ಮಹಾನ್ ಧಾರ್ಮಿಕ ಕಾರ್ಯಕ್ರಮ ಆಯೋಜನೆ. 1972 ರ ಮೇ 7 ರಂದು ಬಂಥನಾಳದಲ್ಲಿ ಲಿಂಗೈಕ್ಯ.

ಬಡತನ ಅಕ್ಷರವಂಚಿತ ಬರಗಾಲ ಪೀಡಿತ ಪ್ರದೇಶವೆಂದು ಕೆಟ್ಟ ಹೆಸರಿಗೆ ಕಾರಣವಾದ ವಿಜಯಪುರಕ್ಕೆ ಹೊಸ ಕಾಯಕಲ್ಪ ಕಲ್ಪಿಸಿಕೊಟ್ಟವರು ಶ್ರೀ ಬಂಥನಾಳ ಸಂಗನ ಬಸವ ಸ್ವಾಮಿಗಳು. ಇಂತಹ ಪರಮ ಪೂಜ್ಯರ ಮೆಟ್ಟಿದಾನೆಲವೆ ಪಾವನ. ಪೂಜ್ಯರ ಕನಸುಗಳು ನನಸಾಗಿ ವಿಜಯಪುರವು ಸಕಲ ಐಭೋಗಳ ಐಸಿರಿಯ ರಾಜಧಾನಿಯಾಗಲಿ. ಶ್ರೇಷ್ಠ ಶಿವಯೋಗ ಸಾಧಕರಾದ ಪರಮ ಪೂಜ್ಯ ಶ್ರೀ ಬಂಥನಾಳ ಸಂಗನ ಬಸವ ಸ್ವಾಮಿಗಳಲ್ಲಿ ಭಕ್ತಿ ಪೂರ್ವಕ ಶರಣಾರ್ಥಿಗಳು
——————————————————————————–
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this