Homeಲೇಖನರಾಷ್ಟ್ರ ಪ್ರಶಸ್ತಿ ವಿಜೇತ ಶೈಕ್ಷಣಿಕ ಕ್ಷೇತ್ರದ ಕಾರ್ಯಕ್ರಮಗಳ ಹರಿಕಾರ ಗೋಕಾಕ ಕ್ಷೇತ್ರಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ

ರಾಷ್ಟ್ರ ಪ್ರಶಸ್ತಿ ವಿಜೇತ ಶೈಕ್ಷಣಿಕ ಕ್ಷೇತ್ರದ ಕಾರ್ಯಕ್ರಮಗಳ ಹರಿಕಾರ ಗೋಕಾಕ ಕ್ಷೇತ್ರಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ

Published on

ಬೆಟಗೇರಿ: ಭಾರತೀಯ ಶೈಕ್ಷಣಿಕ ರಂಗದಲ್ಲಿ ಅತ್ಯುನ್ನತ ಗೌರವಗಳಲ್ಲಿ ಒಂದಾದ ಅತ್ಯುತ್ತಮ ಶಿಕ್ಷಣಾಧಿಕಾರಿ ರಾಷ್ಟೀಯ ಪ್ರಶಸ್ತಿಯನ್ನು ಗುರುವಾರ ಸೆ.೩ರಂದು ನವದೆಹಲಿಯಲ್ಲಿ ಗೋಕಾಕ ಬಿಇಒ ಜಿ.ಬಿ.ಬಳಿಗಾರ ಪಡೆದುಕೊಂಡಿದ್ದಾರೆ.

ಭಾರತ ಸರಕಾರದ ಶಿಕ್ಷಣ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವದೆಹಲಿ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ(ನೀಫಾ) ಇವರು ಪ್ರತಿ ವರ್ಷ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಿ ಉತ್ತಮ ಪರಿಣಾಮ ಪಡೆದಿರುವ ಕ್ಷೇತ್ರಶಿಕ್ಷಣಾಧಿಕಾರಿಗಳಿಗಾಗಿ ಕೊಡಮಾಡುವ ೨೦೨೪-೨೫ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಗೋಕಾಕ ಬಿಇಒ ಜಿ.ಬಿ.ಬಳಿಗಾರ ಭಾಜನರಾಗಿದ್ದಾರೆ.

ಗೋಕಾಕ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಅವರಿಗೆ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ ನವದೆಹಲಿ ವತಿಯಿಂದ ಶಿಕ್ಷಣ ತಜ್ಞ ಪದ್ಮಶ್ರೀ ಪ್ರೋ. .ಎಸ್. ರಜಪೂತ ಅವರು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ನೀಫಾ ಸಂಸ್ಥೆಯ ಕುಲಪತಿ ರಾಮ ದುಬೇ, ಉಪಕುಲಪತಿ ಶಶಿಕಲಾ ವಂಜಾರಿ, ಕಾರ್ಯಕ್ರಮ ನಿರ್ದೇಶಕಿ ಡಾ. ವಿ.ಸುಚರಿತ್ರಾ, ವಿನೀತಾ ಶಿರೋರಿ, ಮತ್ತಿತರರು ಇದ್ದರು.

ಈ ವರ್ಷಪ್ರಶಸ್ತಿ ಸ್ವಿಕರಿಸಿದ ಕನಾಟಕದ ಏಕೈಕ ಬಿಇಒ ಎಂಬ ಹೆಗ್ಗಳಿಕೆಗೆ ಜಿ.ಬಿ.ಬಳಿಗಾರ ಅವರು ಪಾತ್ರರಾಗಿದ್ದಾರೆ. ರಾಷ್ಟ್ರ ಪಶಸ್ತಿ ಪಡೆದ ಜಿಬಿಬಿ ಅವರು ಸದಾ ಕಾಯಕದ ಮೂಲಕ ಶೈಕ್ಷಣಿಕ ದೂರದೃಷ್ಠಿಯ ಚಿಂತನೆಗಳ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರಲ್ಲಿರುವ ಹೊಸತನದ ಶೈಕ್ಷಣಿಕ ಆಲೋಚನೆಗಳು, ವಿನೂತನ ಕಾರ್ಯಕ್ರಮಗಳಿಂದ ಗೋಕಾಕ ಶೈಕ್ಷಣಿಕ ವಲಯದಲ್ಲಿ ಜಿ.ಬಿ.ಬಳಿಗಾರ ಅವಿರತ ಶ್ರಮದ ಸೇವೆಯ ಪ್ರತಿಫಲದಿಂದ ಏನೇಲ್ಲಾ ಸಾಧನೆಗಳು ಸಾಧ್ಯವಾಗಿವೆ.

ಜಿ.ಬಿ.ಬಳಿಗಾರ ಅವರ ಸಾಧನೆಗೆ ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳ ಶಿಕ್ಷಣಪ್ರೇಮಿಗಳು, ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು ಒಂದು ದಶಕಕ್ಕೊ ಹೆಚ್ಚು ಕಾಲ ಬೆಟಗೇರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಗ್ರಾಮೀಣ ಕ್ಷೇತ್ರದ ಮೂಲೆಗಳಲ್ಲಿರುವ ಸರ್ಕಾರಿ ಶಾಲೆಗಳು ಇಂದು ಜಿಲ್ಲೆ, ರಾಜ್ಯಾದ್ಯಂತ ಗುರುತಿಸಿಕೊಂಡಿವೆ ಎಂಬುದಕ್ಕೆ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯೇ ಕೈಗನ್ನಡಿ.

ಇವರ ಆಡಳಿತಾವಧಿಯಲ್ಲಿ ಇಲ್ಲಿಯ ವಿ.ವಿ.ಡಿ.ಸರ್ಕಾರಿ ಪ್ರೌಢ ಶಾಲೆ ಮಲೆನಾಡುಗಾಂಧಿ ಎಚ್.ಜಿ.ಗೋವಿಂದೇಗೌಡ ಹೆಸರಿನಲ್ಲಿ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಪ್ರೌಢ ಶಾಲೆ ಪ್ರಶಸ್ತಿ ಪಡೆದುಕೊಂಡಿದೆ.
ಅಲ್ಲದೇ ಗೋಕಾಕ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅವರ ದಕ್ಷ ಆಡಳಿತ ಪ್ರತೀಕವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಗೋಕಾಕ ಶೈಕ್ಷಣಿಕ ವಲಯ ರಾಜ್ಯದಲ್ಲಿಯೇ ವಲಯವಾರು ಉನ್ನತ ಸ್ಥಾನಗಿಟ್ಟಿಸುವಲ್ಲಿ ಬಿಇಒ ಬಳಿಗಾರ ಅವಿರತ ಶ್ರಮ ಶ್ಲಾಘನೀಯವಾಗಿದೆ.

ಅಲ್ಲದೇ ಜಿಬಿಬಿ ಮೇಷ್ಟ್ರು ದಕ್ಷ ಆಡಳಿತದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶಾಲೆ, ವಿದ್ಯಾರ್ಥಿಗಳು ಜಿಲ್ಲೆ, ತಾಲೂಕು, ವಲಯ ಮಟ್ಟದ ಹಲವಾರು ಪ್ರಶಸ್ತಿ, ಗೌರವಕ್ಕೆ ಪಾತ್ರರಾಗಿ ನಾಡಿನಲ್ಲಿ ತಮ್ಮ ವಿಶಿಷ್ಟ ಸಾಧನೆಗೈದದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇಂದಿನ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ, ವಿದ್ಯಾರ್ಥಿ ಬದುಕಿನ ಭವಿಷ್ಯ ತನ್ನ ಕಲಿಕಾ ಅವಧಿಯಲ್ಲಿ ರೂಪಿಸಿಕೊಳ್ಳಕೆಂಬುವುದು ಬಳಿಗಾರ ಮೇಷ್ಟ್ರು ವಿನ ಸದಾ ತುಡಿತವಾಗಿದೆ. ಹೀಗಾಗಿ ಗೋಕಾಕ ಶೈಕ್ಷಣಿಕ ವಲಯದ ಎಲ್ಲ ಸರ್ಕಾರಿ ಶಾಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಪಠ್ಯ ಮತ್ತು ಪಠ್ಯೇತರ ವಿನೂತನ ಚಟುವಟಿಕೆ ಆಯೋಜಿಸುತ್ತಿರುವುದೇ ಸಾಕ್ಷಿ.!

ವಿನೂತನ ಕಾರ್ಯಕ್ರಮಗಳ ಹರಿಕಾರ: ಗೋಕಾಕ ಶೈಕ್ಷಣಿಕ ವಲಯದ ಬಿಇಒ ಬಳಿಗಾರ ಆಡಳಿತಾವಧಿಯಲ್ಲಿ ಗುರುವಾರ ವಿದ್ಯಾರ್ಥಿ ಮನೆಗೆ ಗುರುಗಳು ಬಂದರು., ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ., ಗುಂಪು ಅಧ್ಯಯನ ಮತ್ತು ಪ್ರಶ್ನೆ, ಉತ್ತರಗಳ ಚರ್ಚೆ, ನುರಿತ ಅಧ್ಯಾಪಕರಿಂದ ವಿಶೇಷ ಪಾಠ ಭೋದನೆ, ಶಾಲಾ ಮಕ್ಕಳಿಗೆ ಮನೆ ಮುಂದೆ ಪಠ್ಯದ ವಿಜ್ಞಾನ ಚಿತ್ರಗಳನ್ನು ರಂಗೋಲಿ ಬಿಡಿಸುವದು ಸೇರಿದಂತೆ ಹೊಸತನದ ಆಲೋಚನೆಗಳ ಮೂಲಕ ವಲಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾದ ವಿಶಿಷ್ಟ ವಿನೂತನ ಹತ್ತು ಹಲವಾರು ಕಾರ್ಯಕ್ರಮಗಳನ್ನು ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳುತ್ತಿರುವದು ಗಮನಾರ್ಹವಾಗಿದೆ. ಹೀಗಾಗಿ ಶಾಲಾ ಮಕ್ಕಳ ಬದುಕಿನಲ್ಲಿ ನಿತ್ಯ ಹೊಸತನ ಕಾರ್ಯಕ್ರಮ ತರುವಲ್ಲಿ ಸದಾ ಹಂಬಲಿಸುವ ಹರಿಕಾರರಾಗಿದ್ದಾರೆ.
ಶಾಲಾ ಮಕ್ಕಳ ಭವಿಷ್ಯಕ್ಕೆ ಶೈಕ್ಷಣಿಕವಾಗಿ ನಾನು ಏನು ಶ್ರಮ ಮಾಡಿದ್ದೇನೆ ಅಂಬುವುದು ಮುಖ್ಯ. ನನ್ನ ವೈಯಕ್ತಿಕ ಸಾಧನೆ ಮುಖ್ಯವಲ್ಲ, ಹಳ್ಳಿಗಾಡಿನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸದಾ ಸಹಾಯ, ಸಹಕಾರ ನೀಡುವಲ್ಲಿ, ಹಳ್ಳಿಗಳಲ್ಲಿಯ ಮಕ್ಕಳು ಉನ್ನತ ಶೈಕ್ಷಣಿಕ ಸಮಗ್ರ ಪ್ರಗತಿ ಸಾಧಿಸಲಿ ಅಂಬುವುದು ಜಿ.ಬಿ.ಬಳಿಗಾರ ಮೇಷ್ಟ್ರುವಿನ ಮನದಾಳದ ಮಾತು ಆಗಿದೆ.

ವರದಿ : ಅಡಿವೇಶ ಮುಧೋಳ, ಬೆಟಗೇರಿ

ಪೋಟೋ: ಬೆಟಗೇರಿ: ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ.

Latest articles

More like this