ಏಷಿಯನ್ ಇಂಟರ್ನ್ಯಾಷನಲ್ ಕಲ್ಚರ್ ಯೂನಿವರ್ಸಿಟಿ ಹಾಗೂ ಅಮೆರಿಕನ್ ವಿಜ್ಡಮ್ ಪೀಸ್ ಯೂನಿವರ್ಸಿಟಿ ಸಹಯೋಗದಲ್ಲಿ ಕಾರ್ಯಕ್ರಮ
ಕಲಬುರ್ಗಿಯ ನೃತ್ಯ ಕಲಾವಿದೆ ಡಾ. ಶುಭಾಂಗಿ ಸುಧೀಂದ್ರ ರವರಿಗೆ ನೃತ್ಯ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ತಮಿಳುನಾಡು ಹೊಸೂರ್ ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯ ವತಿಯಿಂದ ಕಲಾತಪಸ್ವಿನಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಕಳೆದ ನಾಲ್ಕು ದಶಕಗಳಿಂದ ಸಮರ್ಪಣಾಭಾವದಿಂದ ಹಿರಿಯ ನೃತ್ಯಸಾಧಕಿ ಡಾ. ಶುಭಾಂಗಿ ಸುಧೀಂದ್ರ ಅವರು ಕಲ್ಯಾಣ ಕರ್ನಾಟಕದ ಹೆಮ್ಮೆಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ‘ಓಂಕಾರ ನೃತ್ಯ ಸಾಧನಾ’ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನೃತ್ಯಸಾಧನೆಯ ಮೂಲಕ ನೂರಾರು ವಿದ್ಯಾರ್ಥಿಗಳನ್ನು ರೂಪಿಸಿ ಭರತನಾಟ್ಯದ ಪರಂಪರೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಕೊಡುಗೆ ನೀಡುತ್ತ ಸಮಾಜಮುಖಿ ಸೇವಾ ತತ್ಪರಾಗಿದ್ದಾರೆ. ವಿಶ್ವಕರ್ಮ ಗ್ಲೋಬಲ್ ಟ್ರಸ್ಟ್ (ರಿ.) ಸಹಯೋಗದಲ್ಲಿ ಭಾರತೀಯ ಶಾಸ್ತ್ರೀಯ ಪರಂಪರೆಯ ಮಹಿಳಾ ಶ್ರೇಷ್ಠ ಸಾಧಕಿ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು .
ಸರ್ಕಾರಿ ಸೇವೆಯ ಜವಾಬ್ದಾರಿಗಳ ನಡುವೆಯೂ ಕಲಾಸಾಧನೆಯನ್ನು ಕೈಬಿಡದೆ ಸಾಗುವುದು ಸುಲಭವಾಗಿರಲಿಲ್ಲ. ಆದರೆ ನನ್ನ ಕುಟುಂಬದ ಪ್ರೋತ್ಸಾಹ, ಸಹೋದ್ಯೋಗಿಗಳ ಸಹಕಾರ ಮತ್ತು ಕಲೆಯ ಮೇಲಿನ ಅಪಾರ ಪ್ರೀತಿಯೇ ನನ್ನನ್ನು ಮುನ್ನಡೆಸಿತು ಎಂದು ಗೌರವ ಸ್ವೀಕರಿಸಿ ಡಾ. ಶುಭಾಂಗಿ ಸುಧೀಂದ್ರ ತಿಳಿಸಿದರು.
ಕಲೆ ಎಂದರೆ ಕೇವಲ ಪ್ರದರ್ಶನವಲ್ಲ; ಅದು ಸಂಸ್ಕೃತಿ, ಶಿಸ್ತು, ಸಾಧನೆ ಮತ್ತು ಸಮಾಜಸೇವೆಯ ಸಂಗಮ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿರುವ ಡಾ. ಶುಭಾಂಗಿ ಸುಧೀಂದ್ರ ಅವರು ಇಂದಿಗೂ ಭರತನಾಟ್ಯದ ಮೂಲಕ ಭಾರತೀಯ ಸಂಸ್ಕೃತಿಯ ಸಿರಿವಂತಿಕೆಯನ್ನು ಹೊಸ ಪೀಳಿಗೆಗೆ ತಲುಪಿಸುತ್ತಿರುವ ಆದರ್ಶ ಕಲಾಸಾಧಕಿಯಾಗಿದ್ದಾರೆ ಎಂದು ಡಾ. ಕೃಷ್ಣಮೂರ್ತಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭೂಕೈಲಾಸ ಪುಣ್ಯಸ್ಥಳ, ಶ್ರೀ ಕ್ಷೇತ್ರ ಮುಕ್ತಿ ಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ , ಮಾಜಿ ಶಾಸಕ ಡಾ. ಕೆ.ಎ. ಮನೋಕರನ್, ಡಾ. ಕರಾಟೆ ಎ.ಪಿ. ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.