ಬೈಲಹೊಂಗಲ: ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಬೈಲಹೊಂಗಲದ ರವೀಂದ್ರ ಅಣ್ಣಪ್ಪ ಜೋಂಜಾಳೆ ಅವರನ್ನು ವಿವಿಧ ಸಂಘಟನೆಗಳು ಸನ್ಮಾನಿಸಿ ಗೌರವಿಸಿದವು.
ರವೀಂದ್ರ ಅಣ್ಣಪ್ಪ ಜೋಂಜಾಳೆ ಅವರು 01/06/1986 ರಂದು ಭಾರತೀಯ ಸೇನೆಗೆ ಸೇರ್ಪಡೆಗೊಂಡು, 30/06/2008 ರಂದು 22 ವರ್ಷಗಳ ನಿಷ್ಠಾವಂತ ಸೇವೆಯ ನಂತರ ಹವಲ್ದಾರ್ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಅವರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಹೆಮ್ಮೆಯ ಯೋಧರಾಗಿದ್ದಾರೆ. ಪ್ರಸ್ತುತ ಅವರು ಬೈಲಹೊಂಗಲದ ಕೊಪ್ಪದ ಗಲ್ಲಿಯಲ್ಲಿ ನೆಲೆಸಿದ್ದಾರೆ.
ಇವರ ತಂದೆ ಕ್ಯಾಪ್ಟನ್ ಅಣ್ಣಪ್ಪ ಶಿಡಪ್ಪ ಜೋಂಜಾಳೆ ಅವರು ಕೂಡ 03/07/1958 ರಂದು ಸೇನೆಗೆ ಸೇರ್ಪಡೆಗೊಂಡು, 32 ವರ್ಷಗಳ ಸೇವೆಯ ನಂತರ 31/03/1990 ರಂದು ನಿವೃತ್ತರಾಗಿದ್ದರು. ಅವರು 1962 ರ ಭಾರತ-ಚೀನಾ ಯುದ್ಧದಲ್ಲಿ ಭಾಗವಹಿಸಿದ್ದರು.
ಅವರ ನಿಷ್ಠಾವಂತ ಸೇವೆಯನ್ನು ಗುರುತಿಸಿ, ಆಗಿನ ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದ ನೀಲಂ ಸಂಜೀವ ರೆಡ್ಡಿ ಅವರು 01 ನವೆಂಬರ್ 1979 ರಂದು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ತಂದೆ-ಮಗ ಇಬ್ಬರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ,ಜಾಗತಿಕ ಲಿಂಗಾಯತ ಮಹಾಸಭೆ ನಗರ ಘಟಕದ ಅಧ್ಯಕ್ಷರಾದ ಮಹೇಶ ವೀರಭದ್ರಪ್ಪ ಕೋಟಗಿ (ಉಡಿಕೇರಿ), ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ ಹಾಗೂ ಶ್ರೀರಾಮ ವಧು-ವರರ ಅನ್ವೇಷಣೆ ಕೇಂದ್ರದ ರಾಜ್ಯ ಸಂಚಾಲಕರಾದ ಬಸವರಾಜ ಗೋವಿಂದಪ್ಪ ಬಡಿಗೇರ ಅವರು ಸನ್ಮಾನಿಸಿ,ಅಭಿನಂದಿಸಿ,ಶುಭ ಕೋರಿ ತಂದೆ-ಮಗ ಇಬ್ಬರೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಜೋಂಜಾಳೆ ಕುಟುಂಬ ಬೈಲಹೊಂಗಲದ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಜಯಶ್ರೀ ರವೀಂದ್ರ ಜೋಂಜಾಳೆ, ಕಿರಣ ರವೀಂದ್ರ ಜೋಂಜಾಳೆ,ಅರುಣ ರವೀಂದ್ರ ಜೋಂಜಾಳೆ ಉಪಸ್ಥಿತರಿದ್ದರು.