ಮೂಡಲಗಿ : ವಿಶ್ವಕರ್ಮರು ಕಲೆ ಸಾಹಿತ್ಯಕ್ಕೆ ತಮ್ಮದೇ ಆದಂತಹ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರಲ್ಲದೇ, ತಮ್ಮ ಕುಲಕಸುಬುಗಳ ಮೂಲಕ ಜನೋಪಕಾರಿಯಾದ ಕುಶಲಕರ್ಮಿಗಳಾಗಿದ್ದಾರೆ ಎಂದು ಮೂಡಲಗಿ ತಹಸೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು.
ಗುರುವಾರದಂದು ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಮೂಡಲಗಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ಹಾಗೂ ಶ್ರೀ ವಿಶ್ವಕರ್ಮ ಸಮಾಜ ಮೂಡಲಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿಶೇಷ ಉಪನ್ಯಾಸ ನೀಡಿದ ಮೂಡಲಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಸಾಹಿತಿ – ಡಾ ರಾಜು ಕಂಬಾರ ಮಾತನಾಡಿ, ಸೃಷ್ಟಿಸುವ, ರಕ್ಷಿಸುವ ಮತ್ತು ಕ್ರಿಯಾತ್ಮಕಗೊಳಿಸುವ ವಿಶ್ವಕರ್ಮ ವಿಶ್ವದ ಸೃಷ್ಟಿಕರ್ತನಾಗಿದ್ದಾನೆ. ಸೃಷ್ಟಿಕರ್ತನ ಕುಲಬಾಂಧವರಾದ ಪಂಚವರ್ಗದ ವಿಶ್ವಕರ್ಮರು ಕಬ್ಬಿಣ, ಕಟ್ಟಿಗೆ, ಶಿಲ್ಪ, ತಾಮ್ರ ಮತ್ತು ಚಿನ್ನ -ಬೆಳ್ಳಿಯ ಕಾಯಕ ಮಾಡುವುದರೊಂದಿಗೆ ಜನೋಪಕಾರಿಯಾಗಿದ್ದಾರೆ. ದೇಶದ ಕಲೆ, ಸಾಹಿತ್ಯ, ಸಂಸ್ಕೃತಿಗೆ ವಿಶ್ವಕರ್ಮರ ಕೊಡುಗೆ ಅನನ್ಯವಾಗಿದ್ದು, ಪ್ರತಿಭೆಗಳಿಗೆ ಸಮಾಜ ಸೂಕ್ತ ಗೌರವಾದರಗಳನ್ನು ನೀಡಬೇಕೆಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ನೆರಲೇಕರ, ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಶ್ರೀಕಾಂತ ಪತ್ತಾರ, ಶಿಲ್ಪಿಗಳಾದ ವೀರೇಶ ಬಡಿಗೇರ, ಮೌನೇಶ ಪತ್ತಾರ, ಗಜಾನನ ಪತ್ತಾರ, ಚಂದ್ರಶೇಖರ್ ಪತ್ತಾರ ಸೇರಿದಂತೆ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು. ಶಿರಸ್ತೇದಾರರಾದ ಶ್ರೀಕಾಂತ ಮಾಯನ್ನವರ ನಿರೂಪಿಸಿ ವಂದಿಸಿದರು.