ಝೇಂಡಾ ಬೇರೆ ಅಜೆಂಡಾ ಒಂದೆ
ಪಕ್ಷ ಬೇರೆ ಝೇಂಡಾ ಬೇರೆ
ಒಳಗೊಳಗಿನ ಅಜೆಂಡಾ ಒಂದೆ .
ಪತಾಕಿ ಚಿನ್ಹೆ ಬೇರೆ ಬೇರೆ
ದೇಶ ನುಂಗುವ ಜನರು ಒಂದೆ
ಕೂಡಿಕೊಂಡು ಕೊಳ್ಳೆ ಹೊಡೆವರು.
ರಂಗ ಮಂಚದ ಪಾತ್ರ ಬೇರೆ
ತತ್ವ ಸಿದ್ಧಾಂತ ಹೊರಗೆ ಬೇರೆ
ಒಳಗೆ ಕ್ರೂರ ಮುಖಗಳೊಂದೆ.
ಟೋಪಿ ಧರಿಸಿ ಹಲ್ಲು ಕಿರಿದು
ಮೋಸ ಮಾಡುವ ಜನರು ಮುಂದೆ.
ಹಳೆಯ ಸಾರಾಯಿ ಹೊಸ ಬಾಟಲಿ
ಭ್ರಮೆ ಭ್ರಾಂತಿ ನಶೆ ಒಂದೆ .
ಜಾತಿ ಧರ್ಮ ನದಿ ನೀರು
ಸದನದಲ್ಲಿ ಮಾತು ಜೋರು
ನೆರೆಯ ದೇಶದ ಬಾಂಬು ತುಪಾಕಿ
ಸಾಯುತಿಹರು ನಮ್ಮ ಯೋಧರು.
ಹಸಿವು ಶೋಷಣೆ ಮೋಸ ವಂಚನೆ.
ಮಾರುತಿಹರು ರಾಷ್ಟ್ರವ
ಗೊರಕೆ ಹೊಡೆವರು ಸದನದಲ್ಲಿ
ಮೆಜ್ಜು ಕುಟ್ಟುವರು ಎದ್ದು ಕುಳಿತರೆ.
ಐದು ವರ್ಷಕೆ ಮತವ ಹಾಕಿ
ಜಾರಿಕೊಳುವೆವು ನಿದ್ರೆಗೆ
ಬೇಡ ನಮಗೆ ಚುನಾವಣೆ
ಬೇಕು ಕ್ರಾಂತಿ ಪರಿವರ್ತನೆ.
ಕೋಟಿ ಕೋಟಿ ಲೂಟಿ ಮಾಡಿ
ಮತ್ತೆ ನಿಲ್ಲುವ ನಾಯಕ
ಇವರನೊದ್ದು ಪಾಠ ಕಲಿಸಲಿ
ಜನತೆ ರೈತ ಕಾರ್ಮಿಕ .
ಪಕ್ಷ ಬೇರೆ ಝೇಂಡಾ ಬೇರೆ
ಒಳಗೊಳಗಿನ ಅಜೆಂಡಾ ಒಂದೆ .
——————————————————————–
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ