ಸಿಂದಗಿ: ಕವಿತೆಗೆ ಒಂದು ಜವಾಬ್ದಾರಿಯಿದೆ. ಕವಿತೆ ಕವಿಯ ಒಳಗೆ ಹುಟ್ಟಿ ಹಾಲಿನ ರೀತಿಯಲ್ಲಿ ಕುದ್ದು ಕೆನೆಯಾಗಿ ಹೊರಬಂದಂತೆ ಕವಿತೆ ಹಾಗೆ ಹೊರಹೊಮ್ಮಬೇಕು ಮತ್ತು ಕವಿಯ ಶಕ್ತಿ ಎಂದರೆ ಎದುರಿಗೆ ಇರುವ ವ್ಯಕ್ತಿಯ ಮನಸ್ಸನ್ನು ತಲುಪುವ ಸಾಮರ್ಥ್ಯ. ಕವಿತೆ ಸಾರ್ವತ್ರಿಕ ಅನುಭವವಾಗಬೇಕು. ಬರೆದದ್ದು ಎಲ್ಲವೂ ಕವಿತೆಯಾಗುವುದಿಲ್ಲ; ಓದುಗ ಅಥವಾ ಶ್ರೋತೃ ಹೌದು, ಇದು ನನ್ನ ಅನುಭವವೂ ಹೌದು ಎಂದು ಒಪ್ಪಿಕೊಂಡಾಗ ಮಾತ್ರ ಅದು ನಿಜವಾದ ಕವಿತೆಯಾಗುತ್ತದೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಸವಿತಾ ಇನಾಮದಾರ ಹೇಳಿದರು.
ನಗರದ ಎಚ್.ಜಿ.ಪ ಪೂ ಕಾಲೇಜು ಆವರಣದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಧುನಿಕ ಭಗೀರಥ ದಿ.ಎಂ.ಸಿ.ಮನಗೂಳಿ ವೇದಿಕೆಯಲ್ಲಿ ಹಮ್ಮಿಕೊಂಡ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿ, ಕಾವ್ಯ ಅನ್ನುವುದು ಬಹಳ ಹಳೇಯದಾದದ್ದು ಮುಂದೆ ನಾಟಕ, ಗ್ರಂಥಗಳು ಬಂದವು ಓದು ಬರಹ ಗೊತ್ತಿಲ್ಲದ ಸಂದರ್ಭದಲ್ಲಿ ಕಾವ್ಯ ಕಿವಿಯಿಂದ ಕಿವಿಗೆ ಮುಟ್ಟಿಸಿದ ಕವಿತೆ ಕೇವಲ ಮಾಹಿತಿಯನ್ನು ನೀಡುವ ಮಾಧ್ಯಮವಲ್ಲ. ಅದು ಭಾವನೆ, ಅನುಭವ ಮತ್ತು ಚಿಂತನೆಗಳನ್ನು ಅಭಿವ್ಯಕ್ತಿಸುವ ಕಲಾರೂಪ. ಗದ್ಯವು ತೂಕವನ್ನು ಭರಿಸುವ ಶಕ್ತಿ ಪಧ್ಯಕ್ಕಿಲ್ಲ. ಪದ್ಯವು ಹೃದಯವನ್ನು ಸ್ಪರ್ಶಿಸುವ ತನ್ನದೇ ಆದ ವಿಶಿಷÀ್ಟ ಸಾಮರ್ಥ್ಯವನ್ನು ಹೊಂದಿದೆ ಕಾರಣ ಕವಿಗಳು ಬರೆಯುವುದನ್ನು ಬಿಟ್ಟು ಓದಿ ಅದರ ಅರ್ಥವನ್ನು ಆರ್ಥೈಸಿಕೊಂಡಾಗ ಕವಿತೆ ತಾನಾಗಿಯೇ ಹುಟ್ಟಿಕೊಳ್ಳುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಅಧ್ಯಕ್ಷ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಶೋಕ ಅಲ್ಲಾಪುರ, ಅಧ್ಯಕ್ಷತೆ ವಹಿಸಿದ ಇಂಡಿ ತಾಲೂಕಿನ ನಾದ (ಬಿ.ಕೆ.) ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಸಿ.ಎಂ.ಬಂಡಗಾರ ಮಾತನಾಡಿದರು.
ಸಾನಿಧ್ಯ ವಹಿಸಿದ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಆಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ವಾಯ್.ಸಿ.ಮಯೂರ, ಆನಂದ ಶಾಬಾದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನೀಲ ಹಳ್ಳಿ, ಮಲ್ಲನಗೌಡ ಪಾಟೀಲ, ಕುಮಾರ ದೇಸಾಯಿ, ಸತೀಶಗೌಡ ಬಿರಾದಾರ, ಕಮಲಾ ಮುರಾಳ, ಮಡಿವಾಳಮ್ಮ ನಾಡಗೌಡ, ಜಗದೀಶ ಸಾಲಳ್ಳಿ, ಭಾಗ್ಯಜ್ಯೋತಿ ಭಗವಂತಗೌಡರ, ಶೋಭಾ ಮೇಡೆಗಾರ, ಶಾಂತಲಾ ಪಾಟೀಲ, ಅಂಬಿಕಾ ಕರಕಪ್ಪಗೋಳ, ಶೈನಾಬಿ ಮಸಳಿ, ಶೈಲಜಾ ಸ್ಥಾವರಮಠ, ಅನಸೂಯಾ ಪರಗೊಂಡ ಸೇರಿದಂತೆ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಕವಿಗೋಷ್ಠಿಗೂ ಮುನ್ನ: ಸಿಂದಗಿ ೨೧ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬುಧವಾರ ಬೆಳಿಗ್ಗೆ ೧೦ಗಂಟೆಗೆ ಸಂಪ್ರದಾಯ ಬದ್ಧ ಬುತ್ತಿ ಜಾತ್ರೆ ವೈಭವದಿಂದ ನಡೆಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಟಿಪ್ಪು ಸುಲ್ತಾನ್ ವೃತ್ತ, ಜಗದ್ಗುರು ತೊಂಟದ ಸಿದ್ಧಲಿಂಗ ಶ್ರೀಗಳ ರಸ್ತೆ ಮಾರ್ಗವಾಗಿ ಸ್ವಾಮಿ ವಿವೇಕಾನಂದರ ವೃತ್ತ, ದಿ.ಎಂ.ಸಿ.ಮನಗೂಳಿ ರಸ್ತೆ ಮಾರ್ಗವಾಗಿ ವಿವಿಧ ಕಲಾತಂಡಗಳ ವೈಭವ ಮೆರವಣಿಗೆಗೆ ಸಂಚರಿಸಿ ಸಮ್ಮೇಳನದ ವೇದಿಕೆಗೆ ತಲುಪಿತು.
ಗೋಷ್ಠಿಯಲ್ಲಿ ಶೈಲಶ್ರೀ ನ್ಯಾಮಣ್ಣವರ, ವಿವಿಧ ಕವಿ-ಕವಯಿತ್ರಿಯರು ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ, ಗ್ರಾಮೀಣ ಬದುಕು ಹಾಗೂ ಕನ್ನಡ ನಾಡು-ನುಡಿಯ ವೈಭವವನ್ನು ಪ್ರತಿಬಿಂಬಿಸುವ ಕವನಗಳನ್ನು ವಾಚಿಸಿ ಮೆಚ್ಚುಗೆ ಪಡೆದರು. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕವಿಗೋಷ್ಠಿಯನ್ನು ಯಶಸ್ವಿಗೊಳಿಸಿದರು.
ಎಚ್.ಜಿ.ಕನ್ಯಾ ಪ್ರೌಡಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಲಕ್ಷ್ಮಿ ಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಶೈಲಶ್ರೀ ಯಡ್ರಾಮಿ ಸ್ವಾಗತಿಸಿದರು. ಬೆಂಗಳೂರಿನ ಕಲಾವಿಧೆ ಪ್ರಣತಿರಾವ ಗೀತಗಾಯ ಮಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶ್ರೀನಿವಾಸ ಜ್ಯೋಶಿ ವಂದಿಸಿದರು.