ಕ್ಷಣಗಳ ನಿಶ್ಯಬ್ದ ರೈಲು
ಹಳಿ ತಪ್ಪಿದ ಹಳೆಯ ಗಡಿಯಾರದ ಮುಳ್ಳಿನಂತೆ,
ಹೊರಟಿದ್ದೇವೆ ನಾವು—ಎಲ್ಲಿಂದಲೋ ಎಲ್ಲಿಗೋ, ಕೈಲಿ ಯಾವುದೇ ದಿಕ್ಸೂಚಿ ಇಲ್ಲದೆ.ಜೀವನವೆಂದರೆ ಬರೀ ನಿಲ್ದಾಣಗಳ ಬದಲಾವಣೆಯಲ್ಲ,
ಅದು ಒಳಮನಸ್ಸಿನ ಕತ್ತಲ ಕೋಣೆಗೆ ಬೆಳಕಿನ ಕಿಟಕಿಯ ಹುಡುಕುವ ಪಯಣ.
ನೆನಪುಗಳೆಂದರೆ ಒಣಗಿದ ಎಲೆಗಳು,ಕಾಲದ ಬಿರುಗಾಳಿಗೆ ಸಿಕ್ಕಿ ಹಾರುವ ಕಾಗದದ ಚೂರುಗಳು. ನಾವು ದಾಟುತ್ತಿರುವುದು ಕೇವಲ ಮೈಲಿಗಲ್ಲುಗಳನ್ನಲ್ಲ,
ನಮ್ಮದೇ ಅಹಂನ ತರಗೆಲೆಗಳನ್ನು.ಪ್ರತಿ ಹನಿಯ ಕಣ್ಣೀರಲ್ಲೂ ಮೂಡುವುದು ನೋವಿನ ಬಿಂಬವಲ್ಲ,ಮತ್ತೆ ಎದ್ದು ನಿಲ್ಲುವ ಮೌನದ ಪ್ರತಿಬಿಂಬ.
ಬೀದಿದೀಪದ ಕೆಳಗೆ ನಿಂತ ನೆರಳಿನಂತೆ,ಕ್ಷಣಕ್ಷಣವೂ ಕರಗುತ್ತಿದೆ ಅಸ್ತಿತ್ವದ ಆಯಸ್ಸು.ನಾವಿಲ್ಲಿ ಕೇವಲ ಸಹಪ್ರಯಾಣಿಕರು
ಒಂದೇ ಬಂಡಿಯ ಬೇರೆ ಬೇರೆ ಸೀಟುಗಳಲಿ ಅಪರಿಚಿತ ಮುಖಗಳ ನಡುವೆ ಹುಡುಕುತ್ತಿದ್ದೇವೆ,
ಯಾರೋ ಕಳೆದುಹೋದ
ನಮ್ಮದೇ ಹಳೆಯ ಮುಖವನ್ನು.ಸಮಯದ ಮರಳಿನ ಮೇಲೆ ಮೂಡಿದ ಹೆಜ್ಜೆಗಳು,ಅಲೆಗಳ ಹೊಡೆತಕ್ಕೆ ಕಾಯುತ್ತಿರುವ ಕರಾವಳಿಯಂತೆ.
ಇಲ್ಲಿ ಗೆಲುವಿನ ಸಿಹಿ ಕೇವಲ ಭ್ರಮೆ,
ಸೋಲಿನ ಕಹಿ ಕೇವಲ ನಿಮಿತ್ತ. ನಾವು ಧರಿಸಿದ ಬಣ್ಣದ ಉಡುಪುಗಳೆಲ್ಲ ಬಾಡಿಗೆಗೆ ತಂದ ನಾಟಕದ ವೇಷಭೂಷಣಗಳು.
ಹಗಲು ಇರುಳಿನ ಚಕ್ರದ ಉರುಳುವಿಕೆಯಲ್ಲಿ,
ಬದುಕಿನ ಅರ್ಥವನ್ನು ಅರೆಯುವ ಗಿರಣಿ.
ಪ್ರತಿ ನಿಟ್ಟುಸಿರೂ ಒಂದು ಪ್ರಶ್ನೆಯನ್ನು ಬಿತ್ತುತ್ತದೆ ಉತ್ತರವಿಲ್ಲದ ಶೂನ್ಯದ ಒಳಗೆ.
ಆದರೂ ಸಾಗುತ್ತಿದೆ ಪಯಣ ನಿರಂತರ,ಮುಚ್ಚಿದ ಕಣ್ಣುಗಳ ರೆಪ್ಪೆಯ ಮರೆಯಲಿ,
ಹೊಸದೊಂದು ಸೂರ್ಯನ ಹುಟ್ಟನ್ನು ಕನಸುತ್ತಾ ಬಾಳಿನ ಈ ಮುಖವಾಡದ ಸಂತೆ ಮುಗಿಸಿ,ರೈಲು ನಿಲ್ಲುವ ಕೊನೆಯ ನಿಲ್ದಾಣದಲ್ಲಿ,ನಮ್ಮ ಜೊತೆ ಉಳಿಯುವುದು ಲಗೇಜುಗಳಲ್ಲ; ನಾವು ಬಿಟ್ಟುಹೋದ ಹಸ್ತಾಕ್ಷರಗಳು ಮಾತ್ರ.ಈ ಪಯಣ ಚಿರಂತನ, ನಾವು ಕೇವಲ ಚಲಿಸುವ ನೆರಳುಗಳು, ಬೆಳಕಿನ ಬೆನ್ನಟ್ಟಿ ಹೊರಟ ಅಲೆಮಾರಿಗಳು.
================================
ಜಯಶ್ರೀ ಜೆ ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ 9449234142