ಹೈದರಾಬಾದ್ – ನಗರದಲ್ಲಿ ತೀವ್ರ ಅತಿಸಾರದ ಲಕ್ಷಣಗಳೊಂದಿಗೆ ಇಬ್ಬರು ಅಪ್ರಾಪ್ತ ಸಹೋದರಿಯರು ತೀವ್ರವಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದು, ಘಟನೆಯ ಬಗ್ಗೆ ಸಂದೇಹ ವ್ಯಕ್ತವಾದ ಹಿನ್ನೆಲೆಯಲ್ಲಿ ನಾರಾಯಣಗುಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮೃತರನ್ನು 17 ವರ್ಷದ ಭುವನೇಶ್ವರಿ ಮತ್ತು 10 ವರ್ಷದ ಸಂಧ್ಯಾ ಎಂದು ಗುರುತಿಸಲಾಗಿದೆ. ಇವರ ಕುಟುಂಬ ಕರ್ನಾಟಕದ ಬೀದರ್ ಜಿಲ್ಲೆಯವರಾಗಿದ್ದು, ಕೆಲಸ ಅರಸಿ ಹೈದರಾಬಾದ್ಗೆ ವಲಸೆ ಹೋಗಿದ್ದರು. ಘಟನೆಯ ನಂತರ ಪೋಷಕರಾದ ವೈಜನಾಥ್ ಮತ್ತು ಇಂದುಮತಿ ನಾರಾಯಣಗುಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರ ಪ್ರಕಾರ, ತಾಯಿ ಮತ್ತು ನಾಲ್ಕು ಹೆಣ್ಣುಮಕ್ಕಳು ಸೇರಿದಂತೆ ಕುಟುಂಬದ ಹಲವಾರು ಸದಸ್ಯರು ತಮ್ಮ ಮನೆಯಲ್ಲಿ ಆಹಾರವನ್ನು ಸೇವಿಸಿದ ನಂತರ ಅಸ್ವಸ್ಥಗೊಂಡರು ನಂತರ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಭುವನೇಶ್ವರಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟರೆ, ತಂಗಿ ಸಂಧ್ಯಾ ಮಂಗಳವಾರ ಮೃತಪಟ್ಟಿದ್ದಾರೆ. ಉಳಿದ ಕುಟುಂಬ ಸದಸ್ಯರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ
ಘಟನೆಯನ್ನು ಶಂಕಿತ ಫುಡ್ ಪಾಯ್ಸನ್ ಪ್ರಕರಣವೆಂದು ಪರಿಗಣಿಸಲಾಗುತ್ತಿದೆ. ಮನೆಯಲ್ಲಿ ಸೇವಿಸಿದ ಆಹಾರದಿಂದ ವಿಷಪೂರಿತವಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಎಚ್ಒ ಸೈದೇಶ್ವರ ತಿಳಿಸಿದ್ದಾರೆ.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಸಾವಿಗೆ ನಿಖರವಾದ ಕಾರಣ ಕಂಡುಹಿಡಿಯಲು ವೈದ್ಯಕೀಯ ಮತ್ತು ಫೋರೆನ್ಸಿಕ್ ವರದಿಗಳಿಗಾಗಿ ಕಾಯುತ್ತಿದ್ದಾರೆ. ತನಿಖಾಧಿಕಾರಿಗಳು ಘಟನೆಯ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ದುರಂತಕ್ಕೆ ಕಾರಣವೇನು ಎಂಬುದನ್ನು ನಿರ್ಧರಿಸಲು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ