ಇದ್ದಾರೆ ಇಲ್ಲಿ
ಇದ್ದಾರೆ ಇಲ್ಲಿ
ನಮ್ಮ ನಿಮ್ಮಯ ಮಧ್ಯೆ
ಮೇಲೆ ಹತ್ತಿ
ಏಣಿ ಒದೆಯುವವರು
ನಂಬಿಸಿ ವಿಶ್ವಾಸದಲಿ
ನಗು ನಗುತ್ತಲೇ
ಕೂದಲಿನ ಎಳೆಯಲ್ಲಿ
ಕುತ್ತಿಗೆ ಕೊಯ್ಯುವವರು.
ಮುಂದೆ ಹಾಡಿ ಹೊಗಳಿ
ಹಿಂದೆ ಟೀಕಿಸಿ
ಶಾಂತಿಯ ತೋಟದಲಿ
ದ್ವೇಷದ ಮುಳ್ಳು ಹಚ್ಚಿದವರು
ವೇದಿಕೆ ಸಭೆ ಸಮಾರಂಭ
ಶಾಲು ಹಾರ ಸಮ್ಮಾನ
ಮುಂದೆ ಆರತಿ ಎತ್ತಿ
ಬೆನ್ನಿಗೆ ಚೂರಿ ಹಾಕುವವರು.
ಬುದ್ಧ ಬಸವ ಬಾಬಾಸಾಹೇಬ
ಬಾಪೂಜಿ ಘೋಷಣೆ ಕೂಗಿ
ಸಮರಸದ ಹಾಲು ತುಪ್ಪದಲಿ
ಕಾಳಿಂಗ ಸರ್ಪದ ವಿಷ ಸೇರಿಸುವವರು
ಇದ್ದಾರೆ ನಮ್ಮ ನಿಮ್ಮ ಮಧ್ಯೆ
ಚಾವಡಿಯ ನಾಜೂಕಯ್ಯ
ಕದನ ಹೆಚ್ಚಿಸುವ ತಾಟಕಿ
ದೇಶ ಮಾರುವ ದುಷ್ಟ ದುರುಳರು
________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ