ಜಗವ ಗೆದ್ದ ಜಾನಕಿ
ವಸಂತ ಕಾಲದಲಿ
ಹಸಿರಾದ ಕಾಡಿನಲಿ,
ದಿನವೂ ಹಾಡುತಿದ್ದ
ಕೋಗಿಲೆಯೊಂದು.
ಇಂದು ಮೌನವಾಗಿದೆ,
ಸ್ವರ ಬಿಟ್ಟು ಮುಗಿಲು
ಸೇರಿತು ಮೆಲ್ಲಗೆ
ಯಾರ ದೃಷ್ಟಿ ಬಿತ್ತೋ
ಚಂದದ ಧ್ವನಿಗೆ?
ಯಾವ ಬೇಸರವಾಯಿತು
ಮುಗ್ಧ ಮನಕೆ?
ಹಾಡು ನಿಲ್ಲಿಸಿದ
ಕೋಗಿಲೆಯ ಕಂಡು,
ಕರೆದ ಕಾಗೆಯೂ ಮೂಕ
ಪ್ರೇಕ್ಷಕ ದುಃಖದ ಕಡಲು .
ಚಿಲಿಪಿಲಿ ಹಕ್ಕಿಗಳ
ಕಲರವವೂ ನಿಂತಿದೆ,
ತಂಗಾಳಿ ಬೀಸದೆ
ಮಸಣ ಮೌನ.
ಮರಗಿಡ ಕಾನನ
ಕಣ್ಣೀರು ಇಡುತಿವೆ,
ನಿನ್ನ ಗಾನ ಸುಧೆಗೆ
ಮತ್ತೆ ಕಾಯುತಿವೆ.
ಕೋಗಿಲೆಯೇ ಏಕೆ ಮೌನ?
ಶಿಖರ ಬಾಗಿದುದು
ನಿನ್ನ ಸಾಧನ.
ನಿನ್ನ ಜಂಟಿ ಸ್ವರದ ಕೂಗು,
ಹಸಿರಾಗಿಸಲಿ ಒಣಗಿದ ತೋಟದಲಿ
ಹೋಗಿ ಬಾ ತಾಯಿ
ನಿನಗಿದೆ ಶೋಕದ ವಿದಾಯ
ಜಗವ ಗೆದ್ದ ಜಾನಕಿ
ನೀನಿಲ್ಲದೆ ಬಡವಾಯಿತು
ಸ್ವರ ಸಂಗೀತ ಮೂಕಿ
______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ