ಸನ್ಮಾನ್ಯ ಪ್ರೊ ವಿರೂಪಾಕ್ಷಿ ಪೂಜಾರಹಳ್ಳಿ
ಮಾನ್ಯ ಕುಲಸಚಿವರು
ಕನ್ನಡ ವಿಶ್ವ ವಿದ್ಯಾಲಯ ಹಂಪಿ
ಮಾನ್ಯರೇ,
ತಮ್ಮ ಪ್ರತಿಷ್ಠಿತ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಆದ್ಯ ವಚನಕಾರ ದೇವರ ದಾಸಿಮಯ್ಯ. ಮರುಚಿಂತನೆ ಎಂಬ ಕಾರ್ಯಕ್ರಮದ ವಿವರ ನೋಡಿ ಆಶ್ಚರ್ಯ ನೋವಾಯಿತು.
ಡಾ ಫ ಗು ಹಳಕಟ್ಟಿ ಪ್ರೊ ಶಿ ಶಿ ಬಸವನಾಳ ಡಾ ಎಚ್ ದೇವೀರಪ್ಪ ಡಾ ಎಂ ಚಿದಾನಂದಮೂರ್ತಿ ಡಾ ಎಂ ಎಂ ಕಲಬುರ್ಗಿ ಡಾ ವಿದ್ಯಾಶಂಕರ ಡಾ ಕೆ ರವೀಂದ್ರನಾಥ ಶ್ರೀಮತಿ ಗೋಗಿ ಮುಂತಾದ ಅನೇಕ ಸಂಶೋಧಕರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂದು ಸಾಕ್ಷಿ ಆಕರ ಸಮೇತ ಸಿದ್ಧಪಡಿಸಿದ್ದರೂ
ತಮ್ಮ ವಿಶ್ವ ವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಿಂದ ದಿನಾಂಕ 24 ಮಾರ್ಚ್ 2026 ರಂದು ಆದ್ಯ ವಚನಕಾರ ದೇವರ ದಾಸಿಮಯ್ಯ ಮರು ಚಿಂತನೆ ವಿಷಯದ ಮೇಲೆ ಡಾ ವಾಸುದೇವ ಬಡಿಗೇರ ಅವರಿಂದ ಉಪನ್ಯಾಸ ಏರ್ಪಡಿಸಿದ್ದು ಅತ್ಯಂತ ದುರಂತದ ಸಂಗತಿ ಎಂದು ಭಾವಿಸುತ್ತೇನೆ.
ಡಾ ವಾಸುದೇವ ಬಡಿಗೇರ ಅವರಿಗೆ ಮೂರು ವರ್ಷಗಳ ಹಿಂದೆ ಫೋನ್ ಮಾಡಿ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಎಂದು ಹೇಳಿದ್ದೇನೆ. ಡಾ ಬಡಿಗೇರ ಅವರು ತಮ್ಮ ಅತಾರ್ಕಿಕ ಗ್ರಹಿಕೆಯನ್ನೇ ಸಂಶೋಧನೆ ಎನ್ನುವ ಮೊಂಡು ವಾದಕ್ಕೆ ಏನು ಹೇಳಬೇಕು ತಿಳಿಯುತ್ತಿಲ್ಲ.
ಪ್ರೊ. ಡಾ. ಎಂ ಚಿದಾನಂದಮೂರ್ತಿ ಆದಿಯಾಗಿ ಮೇಲ್ಕಂಡ ಮಹನೀಯರು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಕೃಪಾಪೋಷಿತ ಕೆಲವು ಸ್ವಯಂಘೋಷಿತ ಸಂಶೋಧಕರಿಗೆ ಇಬ್ಬರೂ ದಾಸಿಮಯ್ಯನವರಲ್ಲಿನ ವ್ಯತ್ಯಾಸ ತಿಳಿಯದೇ ಇದ್ದದ್ದು ವಿಚಿತ್ರ ಹಾಗೂ ರಹಸ್ಯಮಯವಾಗಿದೆ.
ಈ ಉಪನ್ಯಾಸದಲ್ಲಾದರೂ ಬಡಿಗೇರ ಅವರು ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಅವರಿಬ್ಬರಲ್ಲಿನ ವ್ಯತ್ಯಾಸವನ್ನು ತಮ್ಮ ಪಾಂಡಿತ್ಯದಿಂದ ವಿವರಿಸಿ ನಿಜಸಂಗತಿಯನ್ನು ಬಿಚ್ಚಿಡುವರೆಂದು ತಿಳಿದು ಕೊಂಡಿದ್ದೆ ಆದರೆ ನಿಮ್ಮ ಈ ಮೊದಲಿನ ಅತಾರ್ಕಿಕ ಗ್ರಹಿಕೆಯನ್ನೇ ಮುಂದುವರೆಸಿದ್ದೀರಿ
ಇಂತಹ ಸಂಶೋಧಕರಿಂದ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುವುದು ನಿಶ್ಚಿತ. ಮುಂದೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳಬೇಕೆಂದು ಆಗ್ರಹ.
ಡಾ ಶಶಿಕಾಂತ ಪಟ್ಟಣ, ಪುಣೆ