ಹೂವಿನ ಇರಿತ
ದರ್ಪದಿ ಗಹಗಹಿಸಿ
ಗರ್ಜಿಸಿದವನ ಬಳಿ ಚೂರಿಯಿರಲಾರದು,
ಆದರೆ ಕೂಡಿ ಆಡಿದವನ
ನಕ್ಕ ಸೊಕ್ಕಿನ ನಗು ಮೊಗದಲ್ಲಿ
ಬೆನ್ನಿಗಿರಿಯುವ ಕುತಂತ್ರವಿದ್ದೀತು.
ದ್ವೇಷದಿ ಮಾತಾಡುವವನ ಬಳಿ ಮಾತ್ರ ವೈರವಿಲ್ಲ,
ಪ್ರೀತಿ-ಮಮತೆ ತೋರುವವರಲ್ಲೂ
ಒಳಮುನಿಸು, ಮತ್ಸರದ ಕುಟಿಲತೆಯಿದೆ.
ಸುಳ್ಳ-ಕಳ್ಳನ ಬಳಿ ಮಾತ್ರ
ನಿತ್ಯದ ಒಳಸಂಚಿರದು,
ಸಾವಿನಾಚೆಗೆ ತಲುಪಿದರೂ
ಸತ್ಯವಂತರ ನಿಜರೂಪ ಬಯಲಾಗದು.
ಎಳೆಯ ಮುಳ್ಳು ಚುಚ್ಚಿದರೆ
ಹೆಚ್ಚು ನೋವೆನಿಸದು,
ಆದರೆ ಅರಳಿದ ಮೃದು ಹೂವೇ
ಹೃದಯ ಇರಿದರೆ
ಬಾಳ ಪಯಣವೇ ಮುಗಿದುಹೋಗುವುದು.
ಕರಿ ಗಿರಿಯ ನೆರಳಿನಲಿ
ಭಯವಷ್ಟೇ ಇರಬಹುದು,
ಹಸಿರು ಹಂದರದ ಅಡಿಯಲ್ಲಿ
ಹಾವಿನ ಸುಳಿವಿರಬಹುದು;
ಕತ್ತಲೆಯ ಹಾದಿಗಿಂತಲೂ
ನಂಬಿದ ನಂದಾದೀಪವೇ
ಕಣ್ಣು ಕುರುಡು ಮಾಡುವುದು.
••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ